ಬೆಂಗಳೂರು: 15 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ KIADB ಅಧಿಕಾರಿಯ ‘ಕರಾಳ’ ದಂಧೆ ಪತ್ತೆ!
ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (KIADB) ವಿಶೇಷ ಭೂಸ್ವಾಧೀನ ಅಧಿಕಾರಿಯೊಬ್ಬರು ಭಾರಿ ಮೊತ್ತದ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಘಟನೆಯ ಹಿನ್ನೆಲೆ: 30 ಲಕ್ಷಕ್ಕೆ ಬೇಡಿಕೆ!

ಬಂಧಿತ ಅಧಿಕಾರಿಯನ್ನು ಕೆಎಎಸ್ (KAS) ಅಧಿಕಾರಿ ನಾಗಪ್ರಶಾಂತ್ ಎಂದು ಗುರುತಿಸಲಾಗಿದೆ. ಇವರು ಕೆಐಎಡಿಬಿಯಲ್ಲಿ ವಿಶೇಷ ಸಹಾಯಕ ಆಯುಕ್ತ (ಉತ್ತರ) ಹಾಗೂ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಯಲಹಂಕ ಅತ್ತೂರು ನಿವಾಸಿ ರವಿಕುಮಾರ್ ಎಂಬುವವರ ಕಂದಾಯ ಪ್ರಕರಣಕ್ಕೆ (RRT Case) ಸಂಬಂಧಿಸಿದಂತೆ ಅನುಕೂಲಕರ ಆದೇಶ ನೀಡಲು ನಾಗಪ್ರಶಾಂತ್ ಬರೊಬ್ಬರಿ 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಡ್ರೈವರ್ ಮೂಲಕ ಲಂಚದ ಡೀಲ್
ಲೋಕಾಯುಕ್ತ ಮೂಲಗಳ ಪ್ರಕಾರ, ನಾಗಪ್ರಶಾಂತ್ ಅವರು ನೇರವಾಗಿ ಹಣ ಪಡೆಯದೆ ತಮ್ಮ ಹೊರಗುತ್ತಿಗೆ ಚಾಲಕ ಕುಮಾರ್ ಮುಖಾಂತರ ಹಣ ಸ್ವೀಕರಿಸುತ್ತಿದ್ದರು. ಈ ಹಿಂದೆ ಮೊದಲ ಕಂತಿನ ರೂಪದಲ್ಲಿ 15 ಲಕ್ಷ ರೂಪಾಯಿಗಳನ್ನು ಚಾಲಕನ ಮೂಲಕ ಈಗಾಗಲೇ ಪಡೆದಿದ್ದರು. ಬುಧವಾರ ಉಳಿದ 15 ಲಕ್ಷ ರೂಪಾಯಿಗಳನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ‘ರೆಡ್ ಹ್ಯಾಂಡ್’ ಟ್ರ್ಯಾಪ್
ದೂರುದಾರ ರವಿಕುಮಾರ್ ನೀಡಿದ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಅಧಿಕಾರಿ ನಾಗಪ್ರಶಾಂತ್ ಸೂಚನೆಯಂತೆ ಚಾಲಕ ಕುಮಾರ್ 15 ಲಕ್ಷ ರೂಪಾಯಿ ನಗದನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ದಾಳಿ ಮಾಡಿದ ತಂಡ, ಲಂಚದ ಹಣದೊಂದಿಗೆ ಇಬ್ಬರನ್ನೂ ಬಂಧಿಸಿದೆ.
ಪ್ರಸ್ತುತ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿಗಳ ಈ ದಿಟ್ಟ ಕ್ರಮವು ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದೆ.
Recent Articles