ಸರ್ಕಾರಿ ಸಾಫ್ಟ್ವೇರ್ ಹ್ಯಾಕ್ ಮಾಡಿ 200 ಎಕರೆ ಜಮೀನು ದಗಾಬಾಜಿ: ಶ್ರೀರಂಗಪಟ್ಟಣದಲ್ಲಿ ಲೋಕಾಯುಕ್ತ ಬಿಗ್ ಆಪರೇಷನ್, ಅಧಿಕಾರಿಗಳೂ ಸೇರಿದಂತೆ 9 ಜನ ಅರೆಸ್ಟ್!
ವರದಿಗಾರರು (Reporter)
Hemanth Rajashekar01:25 AM IST

ಶ್ರೀರಂಗಪಟ್ಟಣ: ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಬರೋಬ್ಬರಿ 200 ಎಕರೆಯಷ್ಟು ಬೆಲೆಬಾಳುವ ಸರ್ಕಾರಿ ಜಮೀನನ್ನು ನಕಲಿ ದಾಖಲೆಗಳ ಮೂಲಕ ಲೂಟಿ ಮಾಡಲು ಯತ್ನಿಸಿದ ಮಹಾ ವಂಚನೆಯ ಜಾಲವೊಂದನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಭೇದಿಸಿದ್ದಾರೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇರ ಮಾರ್ಗದರ್ಶನದಲ್ಲಿ ನಡೆದ ಈ ಆಪರೇಷನ್ನಲ್ಲಿ ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವು ಕಡೆ ಏಕಕಾಲಕ್ಕೆ ದಾಳಿ ನಡೆಸಿ, ಒಟ್ಟು 9 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ದಗಾಬಾಜಿ ಜಾಲದ ಪ್ರಮುಖ ಸೂತ್ರಧಾರ, ಭೂ ದಾಖಲೆಗಳ ಸಹಾಯಕ ನಿರ್ದೇಶಕ (ADLR) ಮೊಹಮ್ಮದ್ ಹುಸೇನ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ನಾಲ್ಕು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸರ್ವೇ ನಂಬರ್ 411ರಲ್ಲಿರುವ ಸುಮಾರು 200 ಎಕರೆ ಸರ್ಕಾರಿ ಜಮೀನನ್ನು ನಕಲಿ ದಾಖಲೆಗಳ ಮೂಲಕ ಖಾಸಗಿಯವರ ಹೆಸರಿಗೆ ವರ್ಗಾಯಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿತ್ತು. ಈ ಬಗ್ಗೆ ನಿಖರ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಶ್ರೀರಂಗಪಟ್ಟಣದ ತಹಶೀಲ್ದಾರ್ ಕಚೇರಿ, ಎಡಿಎಲ್ಆರ್ (ADLR) ಕಚೇರಿ, ಮಹದೇವಪುರ ಪಿಡಿಒ ಕಚೇರಿ ಹಾಗೂ ಉಪ ವಿಭಾಗಾಧಿಕಾರಿಗಳ (SDO) ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.
ಸರ್ಕಾರಿ ಸಾಫ್ಟ್ವೇರ್ ಹ್ಯಾಕ್ ಮಾಡಿದ ಖಾಸಗಿ ವ್ಯಕ್ತಿ!
ಲೋಕಾಯುಕ್ತ ತನಿಖೆಯ ವೇಳೆ ಕಣ್ಣು ಜಿಂಯ್ ಎನ್ನುವ ಸತ್ಯವೊಂದು ಹೊರಬಿದ್ದಿದೆ. ನಿತಿನ್ ಪ್ರೇಮಾನಂದ್ ಮಹಾಲೆ ಎಂಬ ಖಾಸಗಿ ಡೇಟಾ ಎಂಟ್ರಿ ಆಪರೇಟರ್, ತಾನೊಬ್ಬ ಸರ್ಕಾರಿ ಭೂಮಾಪಕ (Surveyor) ಎಂದು ಬಿಂಬಿಸಿಕೊಂಡಿದ್ದ. ಸರ್ಕಾರಿ ಅಧಿಕಾರಿಗಳ ಅಧಿಕೃತ ಯೂಸರ್ ಐಡಿ (User ID), ಪಾಸ್ವರ್ಡ್ ಹಾಗೂ ಒಟಿಪಿ (OTP) ಗಳನ್ನು ಅಕ್ರಮವಾಗಿ ಪಡೆದುಕೊಂಡು ಸರ್ಕಾರದ ಅತ್ಯಂತ ಸುರಕ್ಷಿತ ‘ಮೋಜಿನಿ’ (Mojini) ಭೂ ಸರ್ವೇ ಸಾಫ್ಟ್ವೇರ್ಗೆ ಲಾಗಿನ್ ಆಗುತ್ತಿದ್ದ. ಅಲ್ಲಿ ಸರ್ಕಾರಿ ಭೂಮಿಯ ಡಿಜಿಟಲ್ ದಾಖಲೆಗಳನ್ನು ತಿದ್ದಿ, ನಕಲಿ ಆರ್ಟಿಸಿ ಹಾಗೂ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಎನ್ನಲಾಗಿದೆ.
ನಕಲಿ ಸರ್ಕಾರಿ ಸೀಲುಗಳು ಪತ್ತೆ
ಬಂಧಿತ ನಿತಿನ್ ಮಹಾಲೆ ಹಾಗೂ ತಲೆಮರೆಸಿಕೊಂಡಿರುವ ಅಧಿಕಾರಿ ಮೊಹಮ್ಮದ್ ಹುಸೇನ್ ಅವರ ನಿವಾಸಗಳ ಮೇಲೆ ದಾಳಿ ಮಾಡಿದಾಗ ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಶ್ರೀರಂಗಪಟ್ಟಣ ಎಡಿಎಲ್ಆರ್ ಕಚೇರಿ ಮಾತ್ರವಲ್ಲದೆ ಸಕಲೇಶಪುರ, ಹುಣಸೂರು ಮತ್ತು ಮುಳಬಾಗಿಲು ಸರ್ವೇ ಕಚೇರಿಗಳಿಗೆ ಸೇರಿದ ನಕಲಿ ಸರ್ಕಾರಿ ಸೀಲುಗಳು (Official Seals) ಇವರ ಬಳಿ ಪತ್ತೆಯಾಗಿವೆ. ಜೊತೆಗೆ 1.4 ಲಕ್ಷ ರೂಪಾಯಿ ನಗದನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಖಾಸಗಿ ವ್ಯಕ್ತಿಗೆ ಸಂಬಳ ನೀಡುತ್ತಿದ್ದ ಸರ್ಕಾರಿ ಬಾಬುಗಳು!
ಈ ಇಡೀ ಹಗರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಆರೋಪಿ ನಿತಿನ್ ಮಹಾಲೆ ಯಾವುದೇ ಸರ್ಕಾರಿ ನೌಕರನಾಗಿರಲಿಲ್ಲ. ಆದರೂ ಆತನ ಅಕ್ರಮ ಸೇವೆಗಾಗಿ ಕಚೇರಿಯ ಹಲವು ಸರ್ವೇ ಅಧಿಕಾರಿಗಳೇ ತಮ್ಮ ಜೇಬಿನಿಂದ ಆತನಿಗೆ ತಿಂಗಳ ಹಣ ಸಂದಾಯ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಸ್ತುತ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಈ ವಂಚನೆಗೆ ಸಂಬಂಧಿಸಿದಂತೆ ಎಫ್ಐಆರ್ (FIR) ದಾಖಲಾಗಿದ್ದು, ಬಂಧಿತ 9 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಎಡಿಎಲ್ಆರ್ ಅಧಿಕಾರಿ ಮೊಹಮ್ಮದ್ ಹುಸೇನ್ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ. ಸರ್ಕಾರಿ ಭೂಮಿಯನ್ನು ನುಂಗಿ ನೀರು ಕುಡಿಯಲು ಯತ್ನಿಸಿದ ಈ ತಿಮಿಂಗಿಲಗಳ ಬೇಟೆ ಮುಂದುವರಿದಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
100 ಕೋಟಿಯ ಕಳ್ಳನೋಟು! ಅಸ್ಸಾಂ ಪೊಲೀಸರ ಬೃಹತ್ ಬೇಟೆ, ಮಾಸ್ಟರ್ಮೈಂಡ್ ಸಾಹಿಲ್-ಸುಮಿ ದಂಪತಿಗಾಗಿ ತೀವ್ರ ತಲಾಶ್.