ಹೆಚ್ಎಂಟಿ ಭೂ ಹಗರಣದ ಹುತ್ತಕ್ಕೆ ಕೈಹಾಕಿದ ಹೆಚ್.ಡಿ. ಕುಮಾರಸ್ವಾಮಿ: 175 ಎಕರೆ ಲೂಟಿ ಆರೋಪ, ‘ಕೈ’ ನಾಯಕನಿಗೆ ಬಿಗ್ ಶಾಕ್!
ವರದಿಗಾರರು (Reporter)
Hemanth Rajashekar01:47 AM IST

ಬೆಂಗಳೂರಿನ ಹೆಚ್ಎಂಟಿ (Hindustan Machine Tools) ಸಂಸ್ಥೆಯ ಭೂಮಿ ವಿವಾದ ಈಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅತ್ಯಂತ ಗಂಭೀರ ಹಾಗೂ ಸ್ಫೋಟಕ ಆರೋಪವೊಂದನ್ನು ಮಾಡಿದ್ದಾರೆ. ಬೆಂಗಳೂರಿನ ಹೆಚ್ಎಂಟಿಗೆ ಸೇರಿದ ಸುಮಾರು 175 ಎಕರೆ ಅತ್ಯಮೂಲ್ಯ ಭೂಮಿಯನ್ನು 1999 ರಿಂದ 2004 ರ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ಆ ಸಮಯದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಕಾಂಗ್ರೆಸ್ನ ಪ್ರಭಾವಿ ನಾಯಕರೊಬ್ಬರ ನೇರ ಶಾಮೀಲಾತಿಯಿಂದಲೇ ಈ ಬೃಹತ್ ಭೂ ಹಗರಣ ನಡೆದಿದೆ ಎಂದು ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ
ಹೆಚ್ಎಂಟಿ ವಿವಾದಿತ ಭೂಮಿಗೆ ಖುದ್ದಾಗಿ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಪ್ರಸ್ತುತ ಅಲ್ಲಿ ತಲೆಎತ್ತಿರುವ ಹಲವು ಬಹುಮಹಡಿ ಅಪಾರ್ಟ್ಮೆಂಟ್ ಸಮುಚ್ಚಯಗಳನ್ನು ವೀಕ್ಷಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಭೆ ನಡೆಸಿದ ಅವರು, ಭೂ ಹಸ್ತಾಂತರ ಪ್ರಕ್ರಿಯೆ ಹೇಗೆ ನಡೆಯಿತು ಮತ್ತು ಯಾರೆಲ್ಲಾ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖಾ ವರದಿಯನ್ನು ನೀಡುವಂತೆ ಹೆಚ್ಎಂಟಿ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ. ವರದಿ ಕೈ ಸೇರಿದ ತಕ್ಷಣವೇ ಮುಂದಿನ ಕಾನೂನು ಕ್ರಮ ಹಾಗೂ ಉನ್ನತ ಮಟ್ಟದ ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಬಹಿರಂಗ ಸವಾಲು
ಕೇವಲ ಆರೋಪ ಮಾಡುವುದಕ್ಕಷ್ಟೇ ಸೀಮಿತವಾಗದ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. “ಈಗಿರುವ ಅರಣ್ಯ ಸಚಿವರು ಮತ್ತು ಸರ್ಕಾರಕ್ಕೆ ನಿಜವಾಗಿಯೂ ಧೈರ್ಯವಿದ್ದರೆ, ಕಾನೂನುಬಾಹಿರವಾಗಿ ನಿರ್ಮಾಣವಾಗಿರುವ ಈ ಬಹುಮಹಡಿ ಕಟ್ಟಡಗಳನ್ನು ಮತ್ತು ಒತ್ತುವರಿಯಾಗಿರುವ ಹೆಚ್ಎಂಟಿ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲಿ” ಎಂದು ಚಾಲೆಂಜ್ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಇಬ್ಬಂದಿ ನೀತಿಯನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ ಅವರ ಕಡಕ್ ಮಾತು: “ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೊರಟವರ ಕಾಲದಲ್ಲೇ ಹೆಚ್ಎಂಟಿ ಭೂಮಿಯನ್ನು ಲೂಟಿ ಮಾಡಲಾಯಿತು. ನಾನು 2006 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ತಕ್ಷಣವೇ ಹೆಚ್ಎಂಟಿ ಜಮೀನು ಮಾರಾಟ ಹಾಗೂ ನೋಂದಣಿ ಪ್ರಕ್ರಿಯೆಗೆ ಸಂಪೂರ್ಣ ಬ್ರೇಕ್ ಹಾಕಿದ್ದೆ. ಅಂದೇ ನಾನು ಈ ರಿಯಲ್ ಎಸ್ಟೇಟ್ ಮಾಫಿಯಾಗೆ ತಡೆ ಒಡ್ಡದಿದ್ದರೆ ಇಡೀ ಹೆಚ್ಎಂಟಿ ಭೂಮಿ ಇಷ್ಟೊತ್ತಿಗೆ ಧೂಳೀಪಟವಾಗುತ್ತಿತ್ತು.”
ಹೆಚ್ಎಂಟಿ ಪುನಶ್ಚೇತನಕ್ಕೆ ಅಡ್ಡಿಪಡಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹೆಚ್ಎಂಟಿ ಸಂಸ್ಥೆಗೆ ಹೊಸ ಚೈತನ್ಯ ನೀಡಲು ವಿಶೇಷ ಪುನಶ್ಚೇತನ ಪ್ಯಾಕೇಜ್ ಸಿದ್ಧಪಡಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. “ನಾವು ಸಂಸ್ಥೆಯನ್ನು ಉಳಿಸಲು ಯತ್ನಿಸುತ್ತಿದ್ದರೆ, ಕೆಲವರು ಈ ಜಾಗದ ಮೇಲೆ ಕಣ್ಣಿಟ್ಟು ಒತ್ತುವರಿ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಟ್ಟಭದ್ರ ಹಿತಾಸಕ್ತಿಗಳು ಹೆಚ್ಎಂಟಿ ಪುನಶ್ಚೇತನ ಪ್ರಕ್ರಿಯೆಗೆ ಅಡ್ಡಿಪಡಿಸಲು ನಾನು ಬಿಡುವುದಿಲ್ಲ” ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ವಲಯದ ಬೃಹತ್ ಉದ್ಯಮವನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಕೈಗೊಂಡಿರುವ ಈ ಹೆಜ್ಜೆ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: