ಬೆಂಗಳೂರಲ್ಲಿ 25 ಲಕ್ಷ ರೂ. ಕದ್ದು ಪರಾರಿಯಾಗಿದ್ದ ನೇಪಾಳಿ ದಂಪತಿ ಕೇವಲ 24 ಗಂಟೆಯಲ್ಲಿ ಪೊಲೀಸ್ ಬಲೆಗೆ.
ವರದಿಗಾರರು (Reporter)
Hemanth Rajashekar11:54 PM IST

ಬೆಂಗಳೂರು: ಕೆಲಸಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಮಾಲೀಕನ ನಂಬಿಕೆಗೆ ದ್ರೋಹ ಬಗೆದು, ಮನೆಯಲ್ಲಿದ್ದ ಬರೋಬ್ಬರಿ 25 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ದಂಪತಿಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ಬಂಧಿತರನ್ನು ಭುವನ್ ಬಿಸ್ತಾ (35) ಮತ್ತು ಸೀತಾ ಬಿಸ್ತಾ (33) ಎಂದು ಗುರುತಿಸಲಾಗಿದೆ. ಇವರು ಅರ್ಕಾವತಿ ಲೇಔಟ್ನಲ್ಲಿರುವ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಗೃಹ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಳವು ಮಾಡಿದ್ದ ಸಂಪೂರ್ಣ 25 ಲಕ್ಷ ರೂಪಾಯಿ ನಗದನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೀಗ ಒಡೆದು ಹಣದೊಂದಿಗೆ ಎಸ್ಕೇಪ್!
ಅರ್ಕಾವತಿ ಲೇಔಟ್ ನಿವಾಸಿ, ಗುತ್ತಿಗೆದಾರ ಸಿ.ಎಚ್. ಸುಬ್ಬಾರೆಡ್ಡಿ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಸುಬ್ಬಾರೆಡ್ಡಿ ಅವರು ತಮ್ಮ ನಿರ್ಮಾಣ ಕಾಮಗಾರಿ ಕಾರ್ಮಿಕರಿಗೆ ಸಂಬಳ ನೀಡಲು ಬ್ಯಾಂಕ್ನಿಂದ 25 ಲಕ್ಷ ರೂಪಾಯಿ ನಗದು ಹಿಂಪಡೆದು ತಂದಿದ್ದರು. ಈ ಹಣವನ್ನು ಮನೆಯ ಕಪಾಟಿನಲ್ಲಿಟ್ಟು ಸುರಕ್ಷಿತವಾಗಿ ಬೀಗ ಹಾಕಿದ್ದರು.
ಆದರೆ, ಕುಟುಂಬಸ್ಥರೆಲ್ಲರೂ ಹೊರಗಡೆ ಹೋಗಿದ್ದ ಸಮಯವನ್ನು ಹೊಂಚು ಹಾಕಿದ್ದ ನೇಪಾಳಿ ದಂಪತಿ, ಮನೆಯಲ್ಲಿದ್ದ ಕಪಾಟಿನ ರಹಸ್ಯ ಕೀಲಿಕೈಯನ್ನು ಪತ್ತೆ ಹಚ್ಚಿದ್ದಾರೆ. ಕಪಾಟು ತೆರೆದು ಅದರಲ್ಲಿದ್ದ 25 ಲಕ್ಷ ರೂ. ನಗದನ್ನು ದೋಚಿದ್ದಲ್ಲದೆ, ತಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದರು.

ಕೇವಲ 24 ಗಂಟೆಯಲ್ಲಿ ಖಾಕಿ ಕಾರ್ಯಾಚರಣೆ
ಮನೆಗೆ ಮರಳಿದ ಸುಬ್ಬಾರೆಡ್ಡಿ ಅವರಿಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದ ತಕ್ಷಣ, ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಾಂಭೀರ್ಯವನ್ನು ಅರಿತ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದರು. ಮೊಬೈಲ್ ನೆಟ್ವರ್ಕ್ ಮತ್ತು ತಾಂತ್ರಿಕ ವಿಶ್ಲೇಷಣೆಯ ಸಹಾಯದಿಂದ ಆರೋಪಿಗಳ ಸುಳಿವು ಬೆನ್ನಟ್ಟಿದ ಪೊಲೀಸರು, ಕೇವಲ 24 ಗಂಟೆಗಳ ಒಳಗೆ ಕೆಂಗೇರಿಯ ಶಿರಕೆ ಲೇಔಟ್ನಲ್ಲಿರುವ ಇವರ ಸಂಬಂಧಿಕರ ಮನೆಯೊಂದರ ಮೇಲೆ ದಾಳಿ ನಡೆಸಿ ದಂಪತಿಯನ್ನು ಸೆರೆಹಿಡಿದಿದ್ದಾರೆ. ಕೆಂಗೇರಿ ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಕದ್ದ ಇಡೀ ಹಣವನ್ನು ಯಥಾವತ್ತಾಗಿ ರಿಕವರಿ ಮಾಡಲಾಗಿದೆ.
ಐಷಾರಾಮಿ ಜೀವನದ ಆಸೆ!
ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬೇಕು ಮತ್ತು ಐಷಾರಾಮಿ ಜೀವನ ನಡೆಸಬೇಕು ಎಂಬ ದುರಾಸೆಯಿಂದಲೇ ತಾವು ನಂಬಿದ್ದ ಮಾಲೀಕನಿಗೆ ಟೋಪಿ ಹಾಕಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕಳುವು ಮಾಡಿದ್ದಾಗಿ ದಂಪತಿ ಬಾಯಿಬಿಟ್ಟಿದ್ದಾರೆ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: