ಬೆಂಗಳೂರಿನಲ್ಲಿ ಮಾಜಿ ಸಂಸದ ಆದಿಕೇಶವುಲು ನಾಯ್ಡು ಮೊಮ್ಮಗನ ರಂಪಾಟ: ಬೀದಿ ನಾಯಿಯ ಮೇಲೆ ಕಾರು ಹರಿಸಿ ವಿಕೃತಿ, ಎಫ್ಐಆರ್ ದಾಖಲು.
ವರದಿಗಾರರು (Reporter)
Hemanth Rajashekar06:13 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜಯನಗರದಲ್ಲಿ ಅತ್ಯಂತ ಆಘಾತಕಾರಿ ಹಾಗೂ ಅಮಾನವೀಯ ಘಟನೆಯೊಂದು ನಡೆದಿದೆ. ಮಾಜಿ ಸಂಸದ ಹಾಗೂ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಮಾಜಿ ಅಧ್ಯಕ್ಷ ದಿವಂಗತ ಡಿ.ಕೆ. ಆದಿಕೇಶವುಲು ನಾಯ್ಡು ಅವರ ಮೊಮ್ಮಗ ಆದಿ ನಾರಾಯಣ ನಾಯ್ಡು ಎಂಬಾತ, ರಸ್ತೆಯಲ್ಲಿದ್ದ ‘ಜಾಕಿ’ ಎಂಬ ಬೀದಿ ನಾಯಿಯ ಮೇಲೆ ಬೇಕಾಬಿಟ್ಟಿ ಕಾರು ಹರಿಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆಯೂ ಇದೇ ರೀತಿಯ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದ ಈತನ ವಿರುದ್ಧ ಜಯನಗರದ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾರ್ವಜನಿಕರು ಹಾಗೂ ಪ್ರಾಣಿ ದಯಾ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.
ನಡೆದಿದ್ದೇನು?
ಜುಲೈ 24ರಂದು ಮಧ್ಯಾಹ್ನ ಸುಮಾರು 3:20 ರಿಂದ 4:00 ಗಂಟೆಯ ಅವಧಿಯಲ್ಲಿ ಜಯನಗರದ 10ನೇ ‘ಎಫ್’ ಮೇನ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ‘ಜಯನಗರ ಕ್ಯಾನೈನ್ ಸ್ಕ್ವಾಡ್’ನ ಸಕ್ರಿಯ ಸದಸ್ಯ ಹಾಗೂ ಪ್ರಾಣಿ ದಯಾ ಕಾರ್ಯಕರ್ತರಾದ ಬದರಿ ಪ್ರಸಾದ್ ಎಂ.ಎಸ್. (64) ಅವರು ನೀಡಿದ ದೂರಿನ ಪ್ರಕಾರ, ಬಿಳಿ ಬಣ್ಣದ ಕಾರಿನಲ್ಲಿ (ಸಂಖ್ಯೆ: KA-05-NK-5893) ಬಂದ ‘ಆದಿ’ ಎಂಬಾತ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ. ರಸ್ತೆಯಲ್ಲಿ ಶಾಂತವಾಗಿ ನಿಂತಿದ್ದ ‘ಜಾಕಿ’ ಎಂಬ ಬೀದಿ ನಾಯಿಯನ್ನು ನೋಡಿ, ಬೇಕೆಂದೇ ಕಾರನ್ನು ಆ ಕಡೆಗೆ ತಿರುಗಿಸಿ ನಾಯಿಯ ಮೇಲೆ ಹರಿಸಿದ್ದಾನೆ.
ಘಟನೆ ನಡೆದ ತಕ್ಷಣ ಚಾಲಕ ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ‘ಜಾಕಿ’ಯನ್ನು ತಕ್ಷಣವೇ ಸ್ಥಳೀಯ ನಿವಾಸಿಗಳು ರಕ್ಷಿಸಿ, ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ನಾಯಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ವಿಕೃತಿ ಸೆರೆ
ಘಟನೆಯ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರು ಚಾಲಕ ಉದ್ದೇಶಪೂರ್ವಕವಾಗಿಯೇ ನಾಯಿಯತ್ತ ಕಾರನ್ನು ಹರಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಸ್ಥಳೀಯ ನಿವಾಸಿಗಳು ಈ ಸಿಸಿಟಿವಿ ದೃಶ್ಯಾವಳಿ ಹಾಗೂ ಕಾರಿನ ಫೋಟೋಗಳನ್ನು ಪೊಲೀಸರಿಗೆ ಸಾಕ್ಷಿಯಾಗಿ ಸಲ್ಲಿಸಿದ್ದಾರೆ.
“ಇಂತಹ ಅಜಾಗರೂಕತೆಯ ಚಾಲನೆಯು ಕೇವಲ ಮೂಕ ಪ್ರಾಣಿಗಳಿಗೆ ಮಾತ್ರವಲ್ಲದೆ, ರಸ್ತೆಯಲ್ಲಿ ಓಡಾಡುವ ಹಿರಿಯ ನಾಗರಿಕರು, ಮಕ್ಕಳು ಮತ್ತು ಪಾದಚಾರಿಗಳ ಜೀವಕ್ಕೂ ದೊಡ್ಡ ಬೆದರಿಕೆಯಾಗಿದೆ” ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈತನಿಗೆ ಪ್ರಾಣಿಗಳ ಮೇಲೆ ಕಾರು ಹರಿಸುವುದು ಹ್ಯಾಬಿಟ್!
ದೂರಿನಲ್ಲಿ ಉಲ್ಲೇಖಿಸಿರುವಂತೆ, ಆರೋಪಿ ಆದಿ ನಾರಾಯಣ ನಾಯ್ಡು ಹಳೆಯ ಅಪರಾಧಿಯಾಗಿದ್ದು, ಇದೇ ರೀತಿಯ ಕೃತ್ಯವನ್ನು ಈ ಹಿಂದೆಯೂ ಎಸಗಿದ್ದ. ಜನವರಿ 29, 2022 ರಂದು ಇದೇ ಪ್ರದೇಶದಲ್ಲಿ ಬೀದಿ ನಾಯಿಗಳ ಮೇಲೆ ಕಾರು ಹಾಯಿಸಿದ ಪ್ರಕರಣದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪದೇ ಪದೇ ಇಂತಹ ವಿಕೃತ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಪೊಲೀಸರಿಂದ ಪ್ರಕರಣ ದಾಖಲು
ಬದರಿ ಪ್ರಸಾದ್ ಅವರು ನೀಡಿದ ದೂರಿನ ಆಧಾರದ ಮೇಲೆ ಸಿದ್ಧಾಪುರ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಆದಿ ನಾರಾಯಣ ನಾಯ್ಡು ವಿರುದ್ಧ:
- ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 281 (ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ)
- ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 325 (ಮೂಕ ಪ್ರಾಣಿಗಳಿಗೆ ಹಾನಿ/ಕೊಲೆ ಯತ್ನ)
- ಪ್ರಾಣಿ ಹಿಂಸೆ ತಡೆ ಕಾಯ್ದೆ, 1960 ರ ಸೆಕ್ಷನ್ 11(1)
ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಪೊಲೀಸರು ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: