ಬೈಕ್ ಸವಾರರೇ ಎಚ್ಚರ! ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಬೀಳಲಿದೆ ₹5,000 ಭಾರಿ ದಂಡ?
ವರದಿಗಾರರು (Reporter)
Hemanth Rajashekar07:42 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ಪಾದಚಾರಿ ಮಾರ್ಗಗಳ (ಫುಟ್ಪಾತ್) ಮೇಲೆ ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಸವಾರರಿಗೆ ಶೀಘ್ರದಲ್ಲೇ ದೊಡ್ಡ ಆಘಾತ ಕಾಯುತ್ತಿದೆ. ಪಾದಚಾರಿ ಮಾರ್ಗದಲ್ಲಿ ಮೋಟಾರ್ ವಾಹನಗಳನ್ನು ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವಂತೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಪ್ರಸ್ತುತ ಇರುವ ದಂಡ ಎಷ್ಟು? ಇನ್ಮುಂದೆ ಎಷ್ಟು ಕಟ್ಟಬೇಕು?
ಬೆಂಗಳೂರು ನಗರ ಟ್ರಾಫಿಕ್ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ನಂತರ ಸಚಿವ ಕೃಷ್ಣ ಬೈರೇಗೌಡ ಈ ನಿರ್ಧಾರಕ್ಕೆ ಬಂದಿದ್ದಾರೆ.
- ಪ್ರಸ್ತುತ ಇರುವ ದಂಡ: ಪ್ರಸ್ತುತ ನಿಯಮಗಳ ಪ್ರಕಾರ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ₹500 ದಂಡ ವಿಧಿಸಲಾಗುತ್ತಿದೆ.
- ಪ್ರಸ್ತಾವಿತ ಹೊಸ ದಂಡ: ಈ ದಂಡದ ಮೊತ್ತವನ್ನು ₹5,000 ಕ್ಕೆ ಹೆಚ್ಚಿಸಬೇಕೆಂದು ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ.
ಸಚಿವರ ಪ್ರಕಾರ, ₹500 ದಂಡ ಸಣ್ಣ ಮೊತ್ತವಾಗಿರುವುದರಿಂದ ಹಲವು ಸವಾರರು ಯಾವುದೇ ಭಯವಿಲ್ಲದೆ ಪ್ರತಿದಿನ ಈ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ದಂಡದ ಮೊತ್ತವನ್ನು ₹5,000 ಕ್ಕೆ ಏರಿಸಿದರೆ ಮಾತ್ರ ವಾಹನ ಸವಾರರಲ್ಲಿ ಭಯ ಮತ್ತು ಜವಾಬ್ದಾರಿ ಮೂಡಲು ಸಾಧ್ಯ.

ದಿನನಿತ್ಯದ ಕಿರಿಕಿರಿ: ನಾಗರಿಕ ಪ್ರಜ್ಞೆಯ ಕೊರತೆ!
ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ಸೂಚನೆಯಂತೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ, ನಡೆದಾಡುವ ಜನರಿಗೆ ಜಾಗ ಮಾಡಿಕೊಡಲಾಗುತ್ತಿದೆ. ಆದರೆ, ಬೀದಿ ವ್ಯಾಪಾರಿಗಳಿಂದ ತೆರವುಗೊಂಡ ಈ ಜಾಗವನ್ನು ವಾಹನ ಚಾಲಕರು ಮತ್ತು ಬೈಕ್ ಸವಾರರು ತಮ್ಮ ಶಾರ್ಟ್ಕಟ್ ರಸ್ತೆಯಾಗಿ ಬಳಸಿಕೊಳ್ಳುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಭೆಯಲ್ಲಿ ಮಾತನಾಡಿದ ಸಚಿವರು, “ಸಾರ್ವಜನಿಕರ ಸಂಚಾರಕ್ಕೆ ಇರುವ ಜಾಗದಲ್ಲಿ ಬೈಕ್ ಓಡಿಸುವುದು ನಾಗರಿಕ ಪ್ರಜ್ಞೆಯ ಕೊರತೆಯನ್ನು ತೋರಿಸುತ್ತದೆ. ಪಾದಚಾರಿ ಮಾರ್ಗದಲ್ಲಿ ವಾಹನಗಳಿಂದ ಅಪಘಾತ ಸಂಭವಿಸಿ ಸಾರ್ವಜನಿಕರಿಗೆ ಗಾಯ ಅಥವಾ ಜೀವಹಾನಿಯಾದರೆ ಯಾರು ಹೊಣೆ?” ಎಂದು ಪ್ರಶ್ನಿಸಿದರು. ಈ ರೀತಿಯ ಬೇಜವಾಬ್ದಾರಿ ಚಾಲನೆಗೆ ಬ್ರೇಕ್ ಹಾಕಲು ಸಂಚಾರ ಪೊಲೀಸರು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.
ಸಂಚಾರ ಸುಧಾರಣೆಗೆ ಇತರೆ ಪ್ರಮುಖ ಸೂಚನೆಗಳು
ಸಭೆಯಲ್ಲಿ ಕೇವಲ ಫುಟ್ಪಾತ್ ಸಂಚಾರ ಅಷ್ಟೇ ಅಲ್ಲದೆ, ನಗರದ ರಸ್ತೆ ದಟ್ಟಣೆ ಕಡಿಮೆ ಮಾಡಲು ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ:
- ಆಲ್ಟರ್ನೇಟ್ ಪಾರ್ಕಿಂಗ್ (ಒಂದು ಬದಿಯ ಪಾರ್ಕಿಂಗ್): ನಗರದ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ‘ಒಂದು ಬದಿಯ ಪಾರ್ಕಿಂಗ್’ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನಿಯಮ ಮೀರಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವುದನ್ನು ತಡೆಯಬೇಕು.
- ಸಿಗ್ನಲ್ಗಳ ಬಳಿ ಬಸ್ ನಿಲುಗಡೆಗೆ ತಡೆ: ಟ್ರಾಫಿಕ್ ಸಿಗ್ನಲ್ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ ಹಾಗೂ ಜಂಕ್ಷನ್ಗಳಿಂದ 50 ಮೀಟರ್ ವ್ಯಾಪ್ತಿಯಲ್ಲಿ ಬಿಎಂಟಿಸಿ ಸೇರಿದಂತೆ ಯಾವುದೇ ಬಸ್ಗಳು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಅವಶ್ಯಕತೆಯಿದ್ದರೆ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.
ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಬರಿ ಕೋಟ್ಯಂತರ ರೂಪಾಯಿ ಮೂಲಸೌಕರ್ಯ ಹೂಡಿಕೆಯಿಂದಷ್ಟೇ ಪರಿಹರಿಸಲು ಸಾಧ್ಯವಿಲ್ಲ; ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಮೀರಿದರೆ ಜೇಬಿಗೆ ಭಾರಿ ಪೆಟ್ಟು ಬೀಳುವುದು ಖಚಿತ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: